Saturday, 9 March 2019

Kerala rice pathiri/ಅಕ್ಕಿ ರೊಟ್ಟಿ

ನಾನಾ ರೀತಿಯ ರೊಟ್ಟಿಗಳಲ್ಲಿ ಇದು ಒಂದು. ತುಂಬಾ ಸುಲಭದ ಅಕ್ಕಿ ರೊಟ್ಟಿ.
Kerala rice pathiri/ಅಕ್ಕಿ ರೊಟ್ಟಿ:
ಸಾಮಗ್ರಿಗಳು:
1ಕಪ್ ಅಕ್ಕಿ ಹಿಟ್ಟು
1 1/4 ಕಪ್ ನೀರು
ಉಪ್ಪು
ಎಣ್ಣೆ
ವಿಧಾನ:
ನೀರು ಕುದಿಯಲು ಇಟ್ಟು, ಉಪ್ಪು ಎಣ್ಣೆ ಹಾಕಿ, ಕುದಿ ಬಂದ ಮೇಲೆ ಅಕ್ಕಿ ಹಿಟ್ಟನ್ನು ಹಾಕಿ, ಕಲಸಿ, ಸ್ವಲ್ಪ ಆರಿದ ಮೇಲೆ ಚೆನ್ನಾಗಿ ನಾದಿ ಉಂಡೆ ಮಾಡಿ, ಲಟ್ಟಿಸಿ ,ಬೇಯಿಸಿ.
ಯಾವುದೇ ಗ್ರೇವಿ ಜೊತೆ ಒಳ್ಳೆ ಕಾಂಬಿನೇಷನ್. ನಾನು ಇಲ್ಲಿ ಮೊಟ್ಟೆ ಮಸಾಲದ ಜೊತೆ ಸರ್ವ್ ಮಾಡಿದ್ದೇನೆ.

ಮೊಸರು ಕೋಡುಬಳೆ

ರುಚಿಯಾದ ಸುಲಭದ ತಿನಿಸು.
ಮೊಸರು ಕೋಡುಬಳೆ:
1 ಕಪ್ ಮೊಸರು,1/2 ಕಪ್ ನೀರು ,ಮಿಕ್ಸ್ ಮಾಡಿ ಮಜ್ಜಿಗೆ ಮಾಡಿ, ಉಪ್ಪು, ಹಸಿ ಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು, ಇಂಗು, 1/2 ಚಮಚ ಎಣ್ಣೆ ಹಾಕಿ ಕಲಸಿ ಒಲೆ ಮೇಲಿಡಿ. ಮಜ್ಜಿಗೆ ಕುದಿ ಬಂದ ನಂತರ ಅದಕ್ಕೆ 1 ಕಪ್ ಅಕ್ಕಿ ಹಿಟ್ಟು ಸೇರಿಸಿ ಕಲಸಿ ,ಸ್ವಲ್ಪ ಆರಿದ ಮೇಲೆ ನಾದಿ, ಕೋಡುಬಳೆ ಹೊಸೆದು ,ಎಣ್ಣೆಯಲ್ಲಿ ಕರಿಯಿರಿ.


Sunday, 21 October 2018

ಮೊಟ್ಟೆ ಪಡ್ಡು/Egg Paniyaram

ನಾನು ಮಾಡಿದ ಹೊಸ ಪ್ರಯೋಗ ಮೊಟ್ಟೆ ಪಡ್ಡು. ನೀವೂ ಮಾಡಿ ನೋಡಿ

ಬೇಕಾಗುವ ಸಾಮಾಗ್ರಿಗಳು:
ಮೊಟ್ಟೆ-2
ಈರುಳ್ಳಿ-1
ಹಸಿಮೆಣಸು-2
ಅರಿಶಿನ-1/4ಚಮಚ
ಉಪ್ಪು
ಕೊತ್ತಂಬರಿ ಸೊಪ್ಪು-2ಎಸಳು
ಎಣ್ಣೆ
ಮಾಡುವ ವಿಧಾನ:
1. ಮೊದಲಿಗೆ ಒಂದು ಸಣ್ಣ ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ.
2. ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು ಹಾಕಿ 
3.ಅರಿಶಿನ, ಉಪ್ಪು ಹಾಕಿ ಫೋರ್ಕ್ ನಿಂದ ಚೆನ್ನಾಗಿ ಕದಡಿ.
4. ಪಡ್ಡು/ಅಪ್ಪದ ಹೆಂಚು ಬಿಸಿ ಮಾಡಿ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ 3/4 ಭಾಗದಷ್ಟು ಮಿಶ್ರಣ ಎಲ್ಲಾ ಗುಳಿಯಲ್ಲೂ ಹಾಕಿ.
5. ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ, ತಿರುಗಿಸಿ ಮತ್ತೆ ಬೇಯಿಸಿ.

Saturday, 20 January 2018

ಹೆಸರುಬೇಳೆ ಖಾರ ಪೊಂಗಲ್

     
           ಸಂಕ್ರಾಂತಿ ಅಥವಾ ಪೊಂಗಲ್ ಹಬ್ಬಕ್ಕೆ ಸಾಂಪ್ರದಾಯಿಕವಾಗಿ ಮಾಡುವ ಅಡುಗೆ ಇದು. ಇಲ್ಲವಾದಲ್ಲಿ ನೀವು ತಿನ್ನಲು ಬಯಸಿದಾಗ ಮಾಡಿಕೊಳ್ಳುವಂಥ ಸುಲಭ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:
ಹೆಸರುಬೇಳೆ-1/2ಕಪ್
ಅಕ್ಕಿ-1/2ಕಪ್
ಕಾಯಿತುರಿ-1/2ಕಪ್
ಹಸಿಮೆಣಸು-3
ಶುಂಠಿ1-1ಇಂಚು
ಜೀರಿಗೆ
ಕಾಳುಮೆಣಸು
ಕರಿಬೇವು
ಕೊತ್ತಂಬರಿಸೊಪ್ಪು
ಜೀರಿಗೆ ಪುಡಿ-1/2ಚಮಚ
ಅರಿಸಿನ-1/2ಚಮಚ
ಗೋಡಂಬಿ-4-5
ಮಾಡುವ ವಿಧಾನ:
1. ಮೊದಲಿಗೆ ಹೆಸರುಬೇಳೆ &ಅಕ್ಕಿಯನ್ನು ಬೇರೆಬೇರೆಯಾಗಿ ಹುರಿದು ಆರಲು ಬಿಡಿ.
2.ಆರಿದ್ದನ್ನು ತೊಳೆದು ಕುಕ್ಕರಿನಲ್ಲಿ ಹಾಕಿ ನೀರು ಹಾಕಿ ಬೇಯಿಸಿ.
3.ಬಾಣಲೆಗೆ ತುಪ್ಪ ಹಾಕಿ ಹುರಿದು ತೆಗೆದಿಡಿ.
 ಶುಂಠಿ, ಹಸಿಮೆಣಸು, ಜೀರಿಗೆ, ಕಾಳುಮೆಣಸು, ಕರಿಬೇವು ಒಗ್ಗರಣೆ ಮಾಡಿ.
4.ಬೆಂದ ಮಿಶ್ರಣಕ್ಕೆ ಮತ್ತೆ 2ಲೋಟ ನೀರು ಹಾಕಿ,ಉಪ್ಪು ಅರಿಸಿನ, ಜೀರಿಗೆ ಪುಡಿ ,ಕಾಯಿತುರಿ ಹಾಕಿ ಒಂದು ಕುದಿ ಕುದಿಸಿ.
5.ಈಗ ಒಗ್ಗರಣೆ, ಗೋಡಂಬಿ ಹಾಕಿ ಮತ್ತೆ ಕುದಿಸಿ.
6.ಸ್ವಲ್ಪ ನೀರಾಗಿರಲಿ ಆರಿದ ಮೇಲೆ ಗಟ್ಟಿಯಾಗುತ್ತದೆ.
ಇದನ್ನು ಚಟ್ನಿ ಅಥವಾ ರಾಯಿತ ದೊಂದಿಗೆ ಸವಿಯಬಹುದು
ಮಾಡಿ ತಿನ್ನಿ

Sunday, 14 January 2018

ಸಂಕ್ರಾಂತಿ ಎಳ್ಳು-ಬೆಲ್ಲ

       
 ಸಂಕ್ರಾಂತಿ ಹಬ್ಬ ತುಂಬಾ ವಿಶೇಷವಾದ ಹಬ್ಬ. ಸೂರ್ಯದೇವನು ಪುತ್ರ ಶನಿಯನ್ನು ನೋಡಲು ಬರುವ ದಿನ. ರಾಮನು ಸೀತೆಯನ್ನು ರಾವಣ ನಿಂದ ರಕ್ಷಿಸಿ ಅಯೋದ್ಯೆಗೆ ಕರೆ ತಂದ ದಿನ.
          ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ, ಸಿಂಗರಿಸಿಕೊಂಡು ಎಳ್ಳು ಬೆಲ್ಲ ಹಂಚುತ್ತಾ ಒಳ್ಳೊಳ್ಳೆ ಮಾತಾಡಿ ,ದ್ವೇಷ ಮರೆತು ಸ್ನೇಹದಿಂದ ಇರುವ ಎಂದು ಸಾರುವ ದಿನ.
         ಉತ್ತರಕರ್ನಾಟಕದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಊಟದ ಬುತ್ತಿ ಕಟ್ಟಿಕೊಂಡು ಮನೆಯಿಂದ ಹೊರಗೆ ಯಾವುದಾದರೂ ತೋಟ, ಹೊಳೆ ಹೀಗೆ ಅವರಿಗಿಷ್ಟವಾದ ಜಾಗದಲ್ಲಿ ಬಂಧು ಬಳಗ ಸೇರಿ ಉಂಡು ಸಂಭ್ರಮಿಸುತ್ತಾರೆ.ಎತ್ತುಗಳನ್ನು ಸಿಂಗರಿಸಿ ಕೆಂಡ ಹಾಯುವ ಕ್ರೀಡೆ ಆಡುವುದು. ಹೀಗೆ ಹೇಳಿದರೆ ಮುಗಿಯದ ಹಬ್ಬದ ಸಂಭ್ರಮ.
ಹೆಂಗಳೆಯರು ಮನೆಮನೆಗೆ ಹೋಗಿ ಹಂಚುವ ಎಳ್ಳು ಬೆಲ್ಲ ರೆಸಿಪಿ ಇಲ್ಲಿ ತಿಳಿಸಿದ್ದೇನೆ.
ಬೇಕಾಗುವ ಸಾಮಾಗ್ರಿಗಳು:
ಹುರಿದು ಸಿಪ್ಪೆ ತೆಗೆದ ಶೇಂಗಾ-1ಕಪ್
ಒಣಕೊಬ್ಬರಿ ಚೂರು-1ಕಪ್
ಬೆಲ್ಲದ ಚುರು-1ಕಪ್
ಹುರಿದ ಬಿಳಿ ಎಳ್ಳು-3/4ಕಪ್
ಹುರಿಗಡಲೆ/ಪುಟಾಣಿ-3/4ಕಪ್
ಸಿಹಿ ಜೀರಿಗೆ-1/2ಕಪ್
ಸಕ್ಕರೆ ಮಿಠಾಯಿ-1/2ಕಪ್
ಸಕ್ಕರೆ ಗೊಂಬೆ-ಇದ್ದಲ್ಲಿ
ಮಾಡುವ ವಿಧಾನ:
1. ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಅದೇ ಅಳತೆಯಲ್ಲಿ ತೆಗೆದುಕೊಂಡು ಕೂಡಿಸಿ.
2.ಸಣ್ಣ ಜಿಪ್ ಲಾಕ್ ಕವರ್ ತೆಗೆದುಕೊಂಡು ಒಂದು ಸಕ್ಕರೆ ಗೊಂಬೆಯೊಂದಿಗೆ ಸ್ವಲ್ಪ ಮಿಶ್ರಣ ಹಾಕಿ ಸೀಲ್ ಮಾಡಿ ಕೊಡಿ.

Sunday, 24 December 2017

ನೆಲ್ಲಿಕಾಯಿ ತೊಕ್ಕು

 
 ರುಚಿ ಕೆಟ್ಟ ಬಾಯಿಗೆ ನೆಲ್ಲಿಕಾಯಿ ತೊಕ್ಕು ಒಂದು ವಿಶಿಷ್ಟ ರುಚಿ.
ಬೇಕಾಗುವ ಸಾಮಾಗ್ರಿಗಳು:
ನೆಲ್ಲಿಕಾಯಿ -10 ರಿಂದ 12
ಉಪ್ಪು ರುಚಿಗೆ
ಖಾರದಪುಡಿ -3 ರಿಂದ4 ಚಮಚ
ಅರಿಶಿಣದ ಪುಡಿ- ಅರ್ಧ ಚಮಚ
ಮೆಂತ್ಯೆ ಪುಡಿ -1ಚಮಚ
ಸಾಸಿವೆ ಪುಡಿ- 2 ಚಮಚ
ನಿಂಬೆಹಣ್ಣು- 2
ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಜೀರಿಗೆ
ಇಂಗು -ಚಿಟಿಕೆ

ಮಾಡುವ ವಿಧಾನ:
1.ಮೊದಲು ನೆಲ್ಲಿಕಾಯಿಯನ್ನು ತುರಿಯೋಮಣೆಯಲ್ಲಿ ತುರಿದು ಕೊಳ್ಳಬೇಕು.
2.ತುರಿದಿರುವ ನೆಲ್ಲಿಕಾಯಿಗೆ ಉಪ್ಪು, ಖಾರ ,ಅರಿಶಿಣ, ಮೆಂತ್ಯೆ ಪುಡಿ, ಸಾಸಿವೆ ಪುಡಿ ನಿಂಬೆಹಣ್ಣಿನ ರಸ ಎಲ್ಲಾ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು
3.ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ , ಜೀರಿಗೆ , ಇಂಗನ್ನು ಒಗ್ಗರಣೆ ಮಾಡಿ.
4. ಇದು ಆರಿದ ನಂತರ ನೆಲ್ಲಿಕಾಯಿಯ ತೊಕ್ಕು ಹಾಕಿ ಚೆನ್ನಾಗಿ ಕಲಸಬೇಕು . ಈಗ ನೆಲ್ಲಿಕಾಯಿ ತೊಕ್ಕು ರೆಡಿ.
          ಇದು ಹೊರಗಡೆ 5, 6 ದಿನ ಇರುತ್ತದೆ . ಫ್ರಿಡ್ಜ್ ನಲ್ಲಿ 1 ತಿಂಗಳ ವರೆಗೂ ಇರುತ್ತದೆ . ತುಂಬಾ ರುಚಿ ರುಚಿಯಾದ ಈ ತೊಕ್ಕು ನೀವು ಮಾಡಿ ನೋಡಿ ,ತಿಂದು ತಿಳಿಸಿ.

Tuesday, 19 December 2017

ಎಣ್ಣೆ ಉದುರು ಝುಣಕ

     


       ಉದರ ಝುಣಕ ಇದನ್ನು ತಯಾರಿಸಿದ 2 ದಿನಗಳ ವರೆಗೂ ಕೆಡುವುದಿಲ್ಲ. ಪ್ರವಾಸದಲ್ಲಿ ಚಪಾತಿ ಅಥವಾ ರೊಟ್ಟಿಯ ಜೊತೆಗೆ ಇದು ತುಂಬಾ ಒಳ್ಳೆಯದು.ಹಾಗಂತ ಪ್ರವಾಸಕ್ಕೆ ಹೊರಟಾಗ ಮಾತ್ರ ಮಾಡುವ ರೆಸಿಪಿ ಅಂತ ತಿಳಿಯಬೇಡಿ .

ಬೇಕಾಗುವ ಸಾಮಗ್ರಿಗಳು:
ಕಡ್ಲೆಹಿಟ್ಟು-1ಕಪ್
ಎಣ್ಣೆ-1/2ಕಪ್
ಹಾಲು-1ಕಪ್
ಖಾರದ ಪುಡಿ-ರುಚಿಗೆ
ಉಪ್ಪು
ಗರಂ ಮಸಾಲಾ- ಸ್ವಲ್ಪ
ಅರಿಶಿನ ಪುಡಿ -ಸ್ವಲ್ಪ
ಹಿಂಗು-ಚಿಟಿಕೆ
ಸಾಸಿವೆ
ಜೀರಿಗೆ
ಬೆಳ್ಳುಳ್ಳಿ -6-7 ಎಸಳು ( ಬೆಳ್ಳುಳ್ಳಿ ತಿನ್ನದವರು ಬೆಳ್ಳುಳ್ಳಿ ಹಾಕದೆ ಮಾಡಬಹುದು)
ಕರಿಬೇವು -ಸ್ವಲ್ಪ
ಕೊತ್ತಂಬರಿ ಸೊಪ್ಪು- ಸ್ವಲ್ಪ

      ಯಾವ ಕಪ್ ನಿಂದ ಹಿಟ್ಟು ಅಳತೆ  ಮಾಡಿರುವಿರೋ ಅದೇ ಕಪ್ ನ ಅಳತೆ ಹಾಲು ಹಾಕಿ.(ಹಾಲು ಇಷ್ಟ ಪಡದವರು ನೀರು ಬಳಸಿ).

ಮಾಡುವ ವಿಧಾನ:
1.ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ .ಎಣ್ಣೆ ಬಿಸಿ ಆದ ನಂತರ ಸಾಸಿವೆ , ಕರಿಬೇವು ಮತ್ತು ಹಿಂಗು ಹಾಕಿ.
2.ನಂತರ ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿದು ,ಸ್ವಲ್ಪ ಜೀರಿಗೆ ಹಾಕಿ.
3.ನಂತರ ಖಾರದ ಪುಡಿ(ಖಾರಾ ಸ್ವಲ್ಪ ಜಾಸ್ತಿ ಹಾಕಿದರೆ ರುಚಿ ಚೆನ್ನಾಗಿ ಇರುತ್ತೆ.),ಸ್ವಲ್ಪ ಗರಂ ಮಸಾಲಾ, ಅರಿಶಿನ ಪುಡಿ ಹಾಕಿ.
4.ನಂತರ ಹಾಲು ಹಾಕಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಹಾಲು ಕುದಿಯಲು ಆರಂಭಿದ ಮೇಲೆ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪ ಹಾಕುತ್ತಾ ತಿರುವುತ್ತ ಇರಿ.

5.ಹಿಟ್ಟು ಹಾಕಿದ ನಂತರ ಮಧ್ಯಮ ಉರಿಯಲ್ಲಿ 5 ನಿಮಿಷ ಚೆನ್ನಾಗಿ ಬಿಸಿ ಮಾಡಿ.
6.ನಂತರ 15 ನಿಮಿಷಗಳವರೆಗೆ ಆರಲು ಬಿಡಿ.ಝುಣಕ ತಣ್ಣಗಾದ ನಂತರ ಸೌಟಿನಿಂದ ಮತ್ತೊಮ್ಮೆ ಚೆನ್ನಾಗಿ ತಿರುವಿದ ನಂತರ ಝುಣಕ ಉದರುದುರು ಆಗುತ್ತೆ.

       ಜಟ್ ಪಟ್ ಅಂತ ಆಗುವ ಉದುರು ಝುಣಕ ರೆಡಿ.

Sunday, 17 December 2017

ಮೆಂತ್ಯ ಗೊಜ್ಜು/ವೆಂದ್ಯ ಕೊಲಂಬು

           
 ತಮಿಳುನಾಡಿನ ಶೈಲಿ! ಅಧರಕ್ಕೆ ಕಹಿಯಾದದ್ದು ಉದರಕ್ಕೆ ಸಿಹಿ ಅಂತಾರಲ್ಲಾ ಹಾಗೇ ಮೆಂತ್ಯ ತಿನ್ನುವಾಗ ಕಹಿ ಅನ್ನಿಸಿದರೂ ದೇಹಕ್ಕೆ ತುಂಬಾ ಒಳ್ಳೆಯದು!

ಬೇಕಾಗುವ ಸಾಮಾಗ್ರಿಗಳು:
ಮೆಂತ್ಯ(ಮೊಳಕೆ ಕಟ್ಟಿದ್ದು) - 1/2 ಟೀ ಚಮಚ
ಕಡಲೇ ಬೇಳೆ - 1 ಟೇಬಲ್ ಚಮಚ
ಧನಿಯಾ  - 1/2 ಟೇಬಲ್ ಚಮಚ
ಕಾಯಿ ತುರಿ - 2 ಟೇಬಲ್ ಚಮಚ
ಬ್ಯಾಡಗಿ ಮೆಣಸಿನಕಾಯಿ - 6 ರಿಂದ 8
ಈರುಳ್ಳಿ/ಸಾಂಬಾರ್ ಈರುಳ್ಳಿ
ಹುಣಸೇರಸ
ಬೆಲ್ಲ
ಅರಿಸಿನ
ಹಿಂಗು
ಉಪ್ಪ್ಪು

ಒಗ್ಗರಣೆಗೆ:
ಸಾಸಿವೆ
ಕಡ್ಲೆಬೇಳೆ
ಉದ್ದಿನಬೇಳೆ
ಕರಿಬೇವು
ಎಣ್ಣೆ

ಮಾಡುವ ವಿಧಾನ:
1.ಕಡಲೇ ಬೇಳೆ, ಧನಿಯಾ,ಮೆಂತ್ಯ ಎಣ್ಣೆ ಹಾಕದೆ ಹುರಿದು ಪುಡಿ ಮಾಡಿಡಿ.
2. ಬ್ಯಾಡಗಿ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿ.
3. ಎರಡೂ ಪುಡಿಗಳನ್ನು ಕಾಯಿ ತುರಿ ಜೊತೆಗೆ ನುಣ್ಣಗೆ ರುಬ್ಬಿಡಿ.
4. 1/2 ಬಟ್ಟಲ ಸಾಂಬಾರ್ ಈರುಳ್ಳಿ ಸಿಪ್ಪೆ ತೆಗೆದಿಡಿ. ಸಾಂಬಾರ್ ಈರುಳ್ಳಿ ಸಿಗದಿದ್ದರೆ ಒಂದು ದೊಡ್ಡ ಈರುಳ್ಳಿ  ಸಣ್ಣಗೆ ಉದ್ದಕ್ಕೆ ಹೆಚ್ಚಿಡಿ.2 ಚಮಚ ಹುಣಸೆ ರಸ ತೆಗೆದಿಡಿ.
5.ಬಾಣಲೆಯಲ್ಲಿ 4 ಚಮಚ ಎಣ್ಣೆ ಹಾಕಿ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಚಿಟಿಕೆ ಅರಿಶಿನ, ಇಂಗು, ಸಾಂಬಾರ್ ಈರುಳ್ಳಿ ಹಾಕಿ ಸ್ವಲ್ಪ ಹುರಿಯಿರಿ.
6. ಮೊಳಕೆ ಬಂದ 2 ಟೇಬಲ್ ಚಮಚ ಮೆಂತ್ಯ ಹಾಕಿ ಹುರಿದು, ರುಬ್ಬಿದ ಮಿಶ್ರಣ, ಹುಣಸೆ ರಸ, ಕಡಲೇ ಬೀಜದಷ್ಟು ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ತಟ್ಟೆ ಮುಚ್ಚಿ ಮೆಂತ್ಯ ಪೂರ್ತಿಯಾಗಿ ಬೇಯುವವರೆಗೆ ಬೇಯಿಸಿ.
7. ಕೊನೆಯಲ್ಲಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿದರೆ ಆರೋಗ್ಯಕರವಾದ ಮೆಂತ್ಯ ಗೊಜ್ಜು/ವೆಂದ್ಯ ಕೊಳಂಬು ಸಿದ್ಧ!

ಈ ರೆಸಿಪಿ ಮೆಂತ್ಯದ ಮಹತ್ವ ಗೊತ್ತಿರುವವರಿಗೆ ತುಂಬಾ ಇಷ್ಟವಾಗುತ್ತೆ ಎನ್ನುವುದು ನನ್ನ ಅಭಿಪ್ರಾಯ!

*ಮೊಳಕೆ ಬಂದ ಮೆಂತ್ಯದ ಬದಲು ಸಾಧಾರಣ ಮೆಂತ್ಯ ಬೇಕಾದರೆ ಹಾಕಿಕೊಳ್ಳಬಹುದು.ನಿಮ್ಮ ರುಚಿಗೆ ತಕ್ಕಷ್ಟು ಮೆಂತ್ಯ ಹಾಕಿಕೊಳ್ಳಬಹುದು.

*ಅಥವಾ ಮೆಂತ್ಯ ಸೊಪ್ಪು ಹಾಕಿ ಬೇಕಾದರೂ ಮಾಡಬಹುದು!

*ಮೆಂತ್ಯ ಮೊಳಕೆ ಬಂದ ನಂತರ ಕಹಿ ಕಡಿಮೆ ಆಗಿರುತ್ತದೆ. ಆರೋಗ್ಯಕ್ಕೂ ಬಹಳ ಒಳ್ಳೆಯದು!

ಈ ಗೊಜ್ಜು ಅನ್ನ, ಚಪಾತಿಯೊಂದಿಗೆ ಸಹ ತುಂಬಾ ಚೆನ್ನಾಗಿರುತ್ತದೆ!

Saturday, 16 December 2017

ಗೋಧಿ ಹಿಟ್ಟಿನ ದೋಸೆ

     


        ಗೋಧಿ ಹಿಟ್ಟು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇದ್ದೆ ಇರುತ್ತದೆ.ಏನು ತಿಂಡಿ ಮಾಡಲು ತಯಾರಿ ಮಾಡಿಕೊಳ್ಳದಿದ್ದಲ್ಲಿ ಗೋಧಿ ದೋಸೆಯನ್ನು ತಕ್ಷಣಕ್ಕೆ ಮಾಡಬಹುದು.ರುಚಿಯೂ ಚೆನ್ನಾಗಿಯೇ ಇರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಗೋಧಿಹಿಟ್ಟು-2ಲೋಟ
ತೆಂಗಿನತುರಿ-4ಚಮಚ
ಹಸಿಮೆಣಸು-2
ಈರುಳ್ಳಿ-1
ಕರಿಬೇವು
ಶುಂಠಿ
ಉಪ್ಪು
ನೀರು-1ಲೋಟ (ಹಿಟ್ಟಿಗೆ ಬೇಕಾದಷ್ಟು)

ಮಾಡುವ ವಿಧಾನ:
1.ಗೋಧಿಹಿಟ್ಟು ಕಲಸುವ ಮುನ್ನ ಬಾಣಲೆಗೆ ಹಾಕಿ ಸ್ವಲ್ಪ ಹುರಿದುಕೊಂಡರೆ ದೋಸೆ ಚೆನ್ನಾಗಿ ಬರುತ್ತದೆ.
2.ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಕಲಸಿಕೊಳ್ಳಿ.
3.ಇಡ್ಲಿ ಹಿಟ್ಟಿನ ಹದಕ್ಕೆ ಮಾಡಿ,ತುಪ್ಪ ಸವರಿದ ಹೆಂಚಿಗೆ ಹಾಕಿ ಬೇಯಿಸಿ.
4.ಇದು ತೆಳ್ಳಗೆ,ದಪ್ಪಗೆ ಹೇಗೆ ಬೇಕಾದರೂ ಮಾಡಬಹುದು.


ಗಸಿ,ಶೇಂಗಾಚಟ್ನಿ ,ಕಾಯಿಚಟ್ನಿ ಯಾವುದರ ಜೊತೆಗಾದ್ರು ತಿನ್ನಲು ಚೆನ್ನಾಗಿರುತ್ತದೆ. ಸುಲಭವೂ ಕೂಡ.

Friday, 15 December 2017

ಮದ್ದೂರು ವಡೆ

           
          ಮದ್ದೂರು ವಡೆ ..ಇದೊಂದು ಬಹು ಜನಪ್ರಿಯ ತಿಂಡಿ. ಇದು ಮಾಡೋಕೆ ಗೊತ್ತಿಲ್ಲ ಅಂದ್ರೆ ಆಶ್ಚರ್ಯ ಪಡೋ ಜನರೇ ಜಾಸ್ತಿ. ಅಷ್ಟೊಂದು ಹೆಸರುವಾಸಿ ಈ ತಿಂಡಿ.
ಹಲವರು ಹಲವು ಬಗೆಯಲ್ಲಿ ಇದನ್ನು ಮಾಡುತ್ತಾರೆ. ಮಾಡೋದು ಅತ್ಯಂತ ಸುಲಭ. ರುಚಿಯೂ ಹಾಗೆ .. ತುಂಬಾ ಸ್ವಾದಿಷ್ಟ. ಇದಕ್ಕೆ ಮಾರು ಹೋಗದ ಜನರಿಲ್ಲ.
ನನ್ನ ನೆಚ್ಚಿನ ತಿಂಡಿಗಳಲ್ಲಿ ಇದು ಒಂದು.ಇದು ನನ್ನ ಸ್ನೇಹಿತರೊಬ್ಬರ ರೆಸಿಪಿ. 😋

ಬೇಕಾಗುವ ಸಾಮಾಗ್ರಿಗಳು:
ಅಕ್ಕಿ ಹಿಟ್ಟು -1 ಕಪ್
ಚಿರೋಟಿ ರವೆ- 1/2 ಕಪ್
ಮೈದಾ- 1/4 ಕಪ್
ಈರುಳ್ಳಿ- 2 ಸಣ್ಣಗೆ ಹೆಚ್ಚಿದ್ದು
ಹಸಿಮೆಣಸು -ಖಾರಕ್ಕೆ (ನಾನು ಇಲ್ಲಿ 5 ಹಾಕಿದ್ದೇನೆ)
ಅಚ್ಚ ಖಾರದ ಪುಡಿ- 1 ಚಮಚ
ಉಪ್ಪು ರುಚಿಗೆ
ಅರಿಶಿನ ಪುಡಿ -1 ಚಮಚ
ಕಾದ ಎಣ್ಣೆ ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಕಾಯಿಸಲು ಎಣ್ಣೆ

ಮಾಡುವ ವಿಧಾನ:
1.ಮೊದಲಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು ಎಲ್ಲ ಸಣ್ಣಗೆ ಹೆಚ್ಚಿಡಿ.
2.ಒಂದು ಪಾತ್ರೆಗೆ ಅಕ್ಕಿ ಹಿಟ್ಟು, ರವೆ, ಮೈದಾ ಎಲ್ಲ ಹಾಕಿ ಈ ಮೇಲೆ ಹೇಳಿದ ಸಾಮಾಗ್ರಿಗಳೆಲ್ಲ ಹಾಕಿ ಸ್ವಲ್ಪ ಬಿಸಿ ಎಣ್ಣೆ ಹಾಕಿ ನೀರು ಸೇರಿಸಿ ಕಲೆಸಿಕೊಳ್ಳಿ.
3. ಕಲೆಸಿದ ಹಿಟ್ಟನ್ನು ಕೈಯಲ್ಲಿ ವಡೆ ಆಕಾರಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಬಿಟ್ಟು ಎರಡು ಬದಿ ಕಾಯಿಸಿ ತೆಗೆಯಿರಿ.

          ನಿಮ್ಮ ಮದ್ದೂರು ವಡೆ ತಿನ್ನಲು ರೆಡಿ. ಇದನ್ನು ಚಟ್ನಿ ಅಥವಾ ಸಾಸ್ ಜೊತೆ ಸವಿಯಿರಿ.ಸಂಜೆಯ ಚಹಾ ಜೊತೆ ಒಳ್ಳೆಯ ಜೊತೆಗಾರ.

ಹೀರೆಕಾಯಿ ಪಲ್ಯ

         

         ಹೀರೆಕಾಯಿ ಯಿಂದ ಪಲ್ಯ ,ಎಣ್ಣೆಗಾಯಿ, ಸಿಪ್ಪೆಯಿಂದ ಚಟ್ನಿ ಹೀಗೆ ನಾನಾ ಬಗೆ ಮಾಡಬಹುದು. ತಿನ್ನಲು ರುಚಿ. ಎಳೆ ಹೀರೆಕಾಯಿ ಒಂದು ರೀತಿ ಬೆಣ್ಣೆ ರುಚಿ ಕೊಡುತ್ತದೆ. ಹೀರೆಕಾಯಿ ಬಜ್ಜಿಯಂತೂ ನನ್ನ ಫೇವರಿಟ್.
ಬೇಕಾಗುವ ಸಾಮಗ್ರಿಗಳು:
ಹೀರೆಕಾಯಿ-1/4ಕೆಜಿ
ಈರುಳ್ಳಿ-1ದೊಡ್ಡದು
ಟೊಮ್ಯಾಟೋ-1ದೊಡ್ಡದು
ಖಾರದ ಪುಡಿ-1ಚಮಚ
ಬೆಳ್ಳುಳ್ಳಿ
ಸಾಸಿವೆ
ಕರಿಬೇವು
ಬೆಲ್ಲ
ಎಣ್ಣೆ
ಉಪ್ಪ್ಪು
ಗುರೆಳ್ಳು ಪುಡಿ(ಬೇಕಾದಲ್ಲಿ)
ಕಾಯಿತುರಿ(ಬೇಕಾದಲ್ಲಿ)
ಮಾಡುವ ವಿಧಾನ:
1. ಮೊದಲಿಗೆ ಹೀರೆಕಾಯಿ ಸಿಪ್ಪೆ ತುರಿದು ಸಣ್ಣಗೆ ಹೆಚ್ಚಿಕೊಳ್ಳಿ.
2.ಬಾಣಲೆಗೆ ಎಣ್ಣೆ, ಸಾಸಿವೆ,ಕರಿಬೇವು,ಬೆಳ್ಳುಳ್ಳಿ ಹಾಕಿ. ಒಗ್ಗರಣೆ ಮಾಡಿ.
3.ಈರುಳ್ಳಿ ಹಾಕಿ ಹುರಿದು,ಟೊಮ್ಯಾಟೋ ಹಾಕಿ ಮೆತ್ತಗಾಗುವವರೆಗೂ ಹುರಿಯಿರಿ.
4.ಈಗ ಹೀರೆಕಾಯಿ ಸೇರಿಸಿ ಮಿಶ್ರ ಮಾಡಿ,ಚೂರು ಬೆಲ್ಲ ನೀರು ಹಾಕಿ ಬೇಯಲು ಬಿಡಿ.
5.ಬೆಂದು ಮೆತ್ತ ಗಾದ ಹೀರೆಕಾಯಿಗೆ ಉಪ್ಪು,ಖಾರದ ಪುಡಿ,ಗುರೆಳ್ಳು ಪುಡಿ ಹಾಕಿ ಕೈಯಾಡಿಸಿ.
6.ಮುಚ್ಚಿ 1ನಿಮಿಷ ಬೇಯಿಸಿ,ಕೊತ್ತಂಬರಿ ಸೊಪ್ಪು,ಕಾಯಿತುರಿ ಸೇರಿಸಿ.
ಚಪಾತಿ,ರೊಟ್ಟಿ ಜೊತೆ ಚೆನ್ನಾಗಿರುತ್ತದೆ.

*ಗುರೆಳ್ಳು ಪುಡಿ ಬೇಕಾದಲ್ಲಿ ಅಷ್ಟೇ ಹಾಕಿ.
*ಶೇಂಗಾ ಪುಡಿ ಇಲ್ಲಾ ಪುಟಾಣಿ ಪುಡಿ ಹಾಕಿದರೆ ಸ್ವಲ್ಪ ನೀರಾಗಿ ಮಾಡಿದರೆ ರಸ ಬರುತ್ತದೆ.
*ಉದುರು ಪಲ್ಯ ಬೇಕಾದವರು ಜಾಸ್ತಿ ನೀರು ಹಾಕಬೇಡಿ.

Thursday, 14 December 2017

ತೆಂಗಿನಕಾಯಿಚಟ್ನಿ

         
ಚಟ್ನಿಗಳಲ್ಲಿ ತುಂಬಾ ವಿಧ. ಆದರೆ ತೆಂಗಿನಕಾಯಿ ಚಟ್ನಿ ಎಲ್ಲಾ ಮನೆಗಳಲ್ಲಿ ಮಾಡುವ ಸಾಮಾನ್ಯ ಚಟ್ನಿ. ಇಲ್ಲಿದೆ ನಾನು ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು:
ತೆಂಗಿನಕಾಯಿ ತುರಿ-1/2 ಹೋಳು
ಪುಟಾಣಿ-1ಚಮಚ
ಹಸಿಮೆಣಸು-3
ಬೆಳ್ಳುಳ್ಳಿ-5ಎಸಳು
ಹುಣಸೆಹುಳಿ
ಉಪ್ಪು
ಮಾಡುವ ವಿಧಾನ:
1. ಮೊದಲಿಗೆ ಮಿಕ್ಸಿ ಜಾರಿಗೆ ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ರುಬ್ಬಿ.
2.ಒಗ್ಗರಣೆಗೆ:ಎಣ್ಣೆ,ಸಾಸಿವೆ,ಜೀರಿಗೆ,ಕರಿಬೇವು ಹಾಕಿ ಒಗ್ಗರಣೆ ಕೊಡಿ.
3.ರುಚಿಯಾದ ಚಟ್ನಿ ಇಡ್ಲಿ, ದೋಸೆ, ಪಡ್ಡು,ರೊಟ್ಟಿ ಜೊತೆ ತಿನ್ನಲು ತಯಾರು.


*ಖಾರ ಜಾಸ್ತಿ ಆದಲ್ಲಿ ಇಲ್ಲವೇ ಸಿಹಿ ಇಷ್ಟ ಪಡುವವರು ಬೆಲ್ಲ ಹಾಕಬಹುದು.

Wednesday, 13 December 2017

ಟೊಮ್ಯಾಟೋ ಬಾತ್

 
 ಅನ್ನದ ಬಗೆಗಳಲ್ಲಿ ಟೊಮ್ಯಾಟೋ ಬಾತ್ ಸುಲಭವಾಗಿ ಮಾಡುವಂತದು. ತಿನ್ನಲು ರುಚಿಯಾಗಿರುತ್ತದೆ.
ಬೇಕಾಗುವ ಸಾಮಾಗ್ರಿಗಳು:
ಜೀರಾ ಅಕ್ಕಿ/ಬಾಸುಮತಿ ಅಕ್ಕಿ-1ಕಪ್
ಟೊಮ್ಯಾಟೋ-2
ಈರುಳ್ಳಿ-1
ಬೆಳ್ಳುಳ್ಳಿ ಸಿಪ್ಪೆ ಸುಲಿದದ್ದು-5 ಎಸಳು
ಹಸಿಮೆಣಸು-1
ಖಾರದ ಪುಡಿ-1 ದೊಡ್ಡ ಚಮಚ
ಮಸಾಲೆ:ಚಕ್ಕೆ, ಲವಂಗ,ಏಲಕ್ಕಿ, ಅನಾನಸ್ ಹೂ, ಪಲಾವ್ ಎಲೆ-ಎಲ್ಲವೂ ಒಂದೊಂದು
ಕಾಳು ಮೆಣಸು-4
ಎಣ್ಣೆ ಮತ್ತು ತುಪ್ಪ
ಗರಂ ಮಸಾಲ-1/2 ಚಮಚ(ಬೇಕಾದಲ್ಲಿ)
ಕೊತ್ತಂಬರಿಸೊಪ್ಪು, ಪುದೀನಸೊಪ್ಪು
ಮಾಡುವ ವಿಧಾನ:
1. ಮೊದಲಿಗೆ ಅಕ್ಕಿ1 ತೊಳೆದು 1/2 ಗಂಟೆ ನೆನೆಸಿ,ನೀರು ಬಸಿದಿಡಿ.
2. ಕುಕ್ಕರಿಗೆ ಎಣ್ಣೆ ಮತ್ತು ತುಪ್ಪ ಹಾಕಿ ಎಲ್ಲಾ ಮಸಾಲೆ ಹಾಕಿ,ಕೊತ್ತಂಬರಿಸೊಪ್ಪು ,ಪುದೀನಸೊಪ್ಪು ಹಾಕಿ ಹುರಿದು ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ.
3.ಉದ್ದಕ್ಕೆ,ತೆಳ್ಳಗೆ ಹೆಚ್ಚಿದ ಟೊಮ್ಯಾಟೋ ಹಾಕಿ ಹುರಿದು, ಖಾರದ ಪುಡಿ ಸೇರಿಸಿ ಮಿಶ್ರ ಮಾಡಿ.
4.2ಕಪ್ ನೀರು,ಉಪ್ಪು ಹಾಕಿ ಕುದಿಸಿ,ಬಸಿದ ಅಕ್ಕಿ ಹಾಕಿ ಕಲಸಿ ಮುಚ್ಚಳ ಮುಚ್ಚಿ 2 ವಿಸಲ್ ಕೂಗಿಸಿ.
5.ಬಿಸಿ ಬಿಸಿ ಬೇಗ ಆಗುವ ಟೊಮ್ಯಾಟೋ ಬಾತ್ ತಿನ್ನಲು ರೆಡಿ.

*ಸ್ವಲ್ಪ ಅಕ್ಕಿ ಮಾಡೋದಾದರೆ ಗರಂ ಮಸಾಲ ಬೇಕಾಗಿಲ್ಲ,ಮಸಾಲೆ ಪದಾರ್ಥ ಹಾಕಿದರೆ ಸಾಕು.ಜಾಸ್ತಿ ಮಾಡೋದಾದರೆ ಹಾಕಿ.